<ನಳಚರಿತ್ರೆ
ನಳಚರಿತ್ರೆ:ಐದನೆಯ ಸಂಧಿ (ಸಂಗ್ರಹ)
ಐದನೆಯ ಸಂಧಿ

<poem>
ಸೂ|ಅಡವಿಯಲಿ ಪತಿ ಕಳೆದು ಬಿಡೆ ಫಣಿ 
ಯೊಡಲಿಗಿಳಿಯದೆ ಮುಂದೆ ಕರಿಗಳ 
ಪಡೆಗೆರಗಿ ದಮಯಂತಿ ಹೊಕ್ಕಳು ಚೈದ್ಯನಗರಿಯನು 

ಕೇಳು ಕುಂತೀತನಯ ನಳನೃಪ 
ಬೀಳುಕೊಟ್ಟನು ಪುರವನಲ್ಲಂ 
ಮೇಲೆ ನಡೆದರು ಪಯಣಗತಿಯಲಿ ಹಲವು ಯೋಜನವ 
ಹೇಳಲೇನದನವರ ವಿಧಿಯನು 
ತಾಳಿಗೆಗಳೊಣಗಿದವು ಸತಿಯಳ 
ಕಾಲೊಡೆದು ಸುರಿವರುಣಜಲದಲಿ ಬಟ್ಟೆ ಕೆಸರಾಯ್ತು ||೧||

ಎಳೆಯ ಬಾಳೆಯ ಸುಳಿಯು ಅನಲನ 
ಜಳದ ಹೊಯ್ಲಲಿ ನೊಂದವೊಲ್ ಕಡು 
ಬಳಲಿದಬಲೆಯ ಕಂಡು ನೃಪ ಮರುಗಿದನು ಮನದೊಳಗೆ 
ಲಲಿತಹೇಮದ ತೂಗಮಂಚದ
ಹೊಳೆವ ಮೇಲ್ವಾಸಿನಲಿ ಮಲಗುವ 
ಲಲನೆಗೀ ವಿಧಿ ಬಂದುದೇ ಹಾಯೆನುತ ಬಿಸುಸುಯ್ದ ||೨||

ಮರುಗಲಿನ್ನೇಕರಸ ಬಿಡು ವಿಧಿ 
ಬರೆದ ಬರೆಹವ ತಪ್ಪಿಸಲು ಹರಿ 
ಹರವಿರಿಂಚಾದಿಗಳಿಗಳವೇ ನಮ್ಮ ಪಾಡೇನು 
ಹರೆವುದಾಕ್ಷಣ ತುಂಬುವುದು ಗೋ 
ಚರಿಸುವುದು ಸಿರಿ ನಿತ್ಯವೇನಿದ 
ನರಿಯದವನೇ ನೋಯಲೇಕೆಂದಳು ಸರೋಜಮುಖಿ ||೩||

ನುಡಿಯ ಕೇಳುತ ಮನದಿ ಮಿಡುಕುತ 
ಪೊಡವಿಪನು ಸತಿಸಹಿತ ಘನಘೋ 
ರಡವಿಯಲಿ ಬರುತಿರೆ ಜಗನ್ಮೋಹನದ ಪಕ್ಷಿಗಳು 
ಪೊಡವಿಗಿಳಿಯಲು ಕಂಡಪೇಕ್ಷಿಸಿ 
ಪಿಡಿವೆನೆಂದುರವಣಿಸಿ ನೃಪ ಹ 
ಚ್ಚಡವ ಬೀಸಿದಡದನು ಕೊಂಡೊಯ್ದವು ನಭಸ್ಥಳಕೆ ||೪||

ಮೂಗಿನಲಿ ಬೆರಳಿಟ್ಟು ಮಕುಟವ 
ತೂಗಿದನು ನಸುನಗುತ ನಿಂದಿರ 
ಲಾಗ ಸೂಚಿಸಿದವು ನಿರಂತರ ರಾಜ್ಯ ಭೋಗವನು 
ಬೇಗದಿಂದಪಹರಿಸಿಕೊಂಡವ 
ರೀಗವಾವಿದನರಿದಿರೆಂದು ಸ 
ರಾಗದಿಂದಲಿ ಮಾಯವಾದವು ಪಕ್ಷಿಯುಗಳಗಳು ||೫||

ಧರಣಿಪತಿ ಕೇಳ್ ನಿಷಧಪತಿ ಕಲಿ 
ಪುರುಷ ಮಾಯವ ಬಲ್ಲನೆ ಮನ 
ಮರುಗಿ ನಿರ್ವಾಣದಲಿ ನಿಂದಿರಲಾಗ ಸತಿ ಕಂಡು 
ಹರಹರಾಯೆನುತಾಗ ಸೀರಿಯ 
ಸೆರಗ ಹರಿದಿತ್ತಳು ನೃಪಾಲಗೆ 
ಶಿರವ ನಸುಬಾಗಿದನು ನಾಚಿಕೆಯಾಗಲಿಂತೆಂದ ||೬||

ಧರೆಯ ನೃಪರಿಗೆ ನಿಷಧಪುರಪತಿ 
ಯರಮನೆಯ ಬಾಗಿಲಿನ ಸುಮುಖವು 
ದೊರಕಲದು ತಾ ಪುಣ್ಯವೆಂಬೀಯರಸುತನ ನಮಗೆ 
ಹರೆದುದೆಲ್ಲ ಸಮಸ್ತರಾಜ್ಯದ 
ಸಿರಿಗೆ ಬಾಹಿರನಾಗಿ ಸತಿಯಳ 
ಸೆರಗನುಡುವಂತಾಯ್ತೆ ಹರಹರಯೆನುತ ಬಿಸುಸುಯ್ದ ||೭||

ಧರೆಯ ಸಂಪದದಷ್ಟಭೋಗವ 
ಪರಿಹರಿಸಿ ನಿಜಪುತ್ರಮಿತ್ರರ 
ತೊರೆದು ನಂಬಿದ ಸತಿಯ ಘೋರಾರಣ್ಯಮಧ್ಯದಲಿ 
ಹಿರಿದು ಬಳಲಿಸಿ ನೋಯಿಸಿದೆ ಕೇಳ್ 
ತರುಣಿಯೆನ್ನವೊಲಾರು ಪಾಪಿಗ 
ಳಿರದೆ ನೀ ಹೋಗಿನ್ನು ತಂದೆಯ ಮನೆಗೆ ನಡೆಯೆಂದಾ ||೮||

ಇನಿಯನಾಡಿದ ನುಡಿಗೆಯಂಗನೆ 
ಕನಲಿ ನುಡಿದಳು ಶೋಕದಲಿ ನೀ 
ನಿನಿತು ಮುನಿದಾಡುವರೆ ಸಾಕಿನ್ನಾರು ಗತಿಯೆನಗೆ 
ಅನುದಿನವು ನಾ ನಿಮ್ಮ ಪದಯುಗ 
ವನಜವನು ಭಜಿಸುವುದ ತೊರೆದೀ 
ತನುವ ಸೈರಿಸಲಾಪೆನೆ  ಹೇಳೆಂದಳಿಂದುಮುಖಿ ||೯||

ನೆಳಲು ತನುವಿನ ಬಳಿಯೊಳಲ್ಲದೆ 
ಚಲಿಸುವುದೆ ತಾ ಬೇರೆ ನಿಮ್ಮಡಿ 
ನಳಿನದಲಿ ಸುಖದುಃಖವಲ್ಲದೆ ಬೇರೆ ಗತಿಯುಂಟೆ 
ಹಳುವವೇ ಸಾಮ್ರಾಜ್ಯ ನಿಮ್ಮಡಿ 
ನೆಳಲಿನಲಿ ತಾನಿರುವೆನಲ್ಲದೆ 
ನಿಳಯವೇ ನನಗಡವಿಯೆಂದೆರಗಿದಳು ಪದಯುಗಕೆ ||೧೦||

ಎನುತ ಸುರಿದಳು ಕಣ್ಣಿನಲಿ ಕಂ 
ಬನಿಯ ಮಿಡಿದಳು ಬೆರಳಿನಲಿ ಮು 
ನ್ನಿನಲಿ ಮಾಡಿದ ಕರ್ಮಫಲವಿದಕೇನ ಮಾಡುವುದು 
ಎನಗೆ ಚಿಂತಿಸಲೇಕೆ ನೀನಿಂ 
ದಿನಲಿ ನಿರ್ಮಲಚಿತ್ತದಲಿ ಕಾ 
ನನವ ಸಂಚರಿಸುವೆನು ನಿಮ್ಮೊಡನೆಂದಳಿಂದಮುಖಿ ||೧೧||

ಶೋಕವೇಕೆಲೆ ತರುಣಿ ಬಾರೆಂ 
ದಾಕಮಲಲೋಚನೆಯ ತೋಳಿನೊ 
ಳೌಕಿ ಬಿಗಿಯಪ್ಪಿದನು ಸೆರಗಿನೊಳಿರಸಿ ಕಂಬನಿಯ 
ಜೋಕೆಯಲಿ ಕುಳ್ಳಿರಿಸಿ ತೊಡೆಯೊಳ 
ನೇಕ ಪ್ರೀತಿಯೊಳೆಂದ ನೀನವಿ 
ವೇಕಿಯೇ ಬಿಡು ಮನದ ದುಗುಡವೆಂದನಾ ನೃಪತಿ ||೧೨||

ಎಂದು ಸತಿಯಳ ಸಂತವಿಟ್ಟರ 
ವಿಂದನಾಭಧ್ಯಾನದಲಿ ಬರೆ 
ಮುಂದೆ ಘೋರಾರಣ್ಯವೆಸೆದುದು ಘನಭಯಂಕರದಿ 
ಸಂದ ಖಗಮೃಗವಲ್ಲಿ ನೆರೆದಿರೆ 
ಬಂದು ಹೊಕ್ಕರು ಕಾನನವನರ 
ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಚಿಮಾಂಬುಧಿಯ ||೧೩||

ಲೋಕಕಧಿಪತಿ ನಳನ ರಾಣಿಗೆ 
ಶೋಕ ಪರ್ಬಿದ ತೆರದಿ ಕತ್ತಲೆ 
ಲೋಕವನು ಮುಸುಕಿದುದು ಭರಣಿಯ ಮುಚ್ಚುವಂದದಲಿ 
ಭೀಕರಧ್ವನಿಗಳಿಗೆ ಹೆದರಿದ 
ಳಾ ಕಮಲಲೋಚನೆಯ ಕಂಡು ವಿ 
ವೇಕನಿಧಿ ಸಂತಯಿಸಿ ಬಿಗಿಯಪ್ಪಿದನು ತೂಪಿರಿದು ||೧೪||

ತರುಣಿಯಂಜದಿರಂಜದಿರು ವಿಧಿ 
ಬರೆದ ಬರಹವಿದೆನುತ ವೃಕ್ಷದ 
ತರಗೆಲೆಯ ಹಾಸಿನಲಿ ಮಲಗಿಸಿ ಸತಿಯನೀಕ್ಷಿಸುತ 
ವರರತುನಮಂಚದಲಿ ಪವಡಿಸಿ 
ಪರಮಸುಖವಿಹ ಸತಿಗೆ ವಿಧಿಯಿದು 
ಹರಹರಾಯೆನುತರಸ ಕಂಬನಿದುಂಬಿದನು ಮರುಗಿ ||೧೫||

ಎಲ್ಲರೋಪಾದಿಯ ಪತಿವ್ರತೆ 
ಯಲ್ಲವೀ ದಮಯಂತಿ ಬಿಡುವವ 
ಳಲ್ಲ ತನ್ನನು ತರುಣಿ ಕಾಣದ ಕಡೆಗೆ ತೆರಳಿದರೆ 
ಅಲ್ಲಿ ತಂದೆಯ ಮನೆಗೆ ಹೋಗುವ 
ಳಿಲ್ಲಿ ತಾನಿರೆ ಬಿಡಳೆನುತ ಮನ 
ದಲ್ಲಿ ಯೋಚಿಸಿ ನಿದ್ರೆಗೈಸಿದನಾ ಮಹಾಸತಿಯ ||೧೬||

ಮರೆದು ಮಲಗಿದಳವಳ ಮಗ್ಗುಲ 
ಸೆರಗ ಮೆಲ್ಲನೆ ಜಾರಿಸುತಲಾ 
ಗರಸ ವಸನವ ಕೊಂಡು ಮಲಗಿದ ಸತಿಯನೀಕ್ಷಿಸುತ 
ಮರುಗಿದನು ಮನದೊಳಗೆ ಹರಿಹರಿ 
ವರ ಜಗತ್ಪತಿ ಅಡವಿಯಲಿ ಎ 
ಚ್ಚರಿಸದೇ ತಾನೆಂತು ಪೋಗುವೆನೆನುತ ಬಿಸುಸುಯ್ದ ||೧೭||

ಮಡದಿಯಗಲಿದ ಬಳಿಕ ಹತ್ತೆಂ 
ಟಡಿಯ ದಾಂಟುವ ಮರಳಿ ನಿಜಸತಿ 
ಯೆಡೆಗೆ ತಿರುಗುವ ಚಂದ್ರಬಿಂಬಾನನೆಯನೀಕ್ಷಿಸುವ 
ಅಡಸಿ ಬರೆ ದುಃಖದಲಿ ಮೆಲ್ಲಡಿ 
ಯಿಡುವ ಸತಿಯನು ನೋಡಿ ಮನದು 
ಗ್ಗಡದ ಶೋಕದಿ ನಡೆದ ನಳನೃಪನೊಂದು ಯೋಜನವ ||೧೮||

ಮರುಗುವುದು ಮನವೊಮ್ಮೆ ಕಂಗಳು 
ಮರಳಿ ನೋಡುವುದೊಮ್ಮೆ ಸತಿಯಳ 
ಯಿರವ ಕಾಣದೆ ಕಳವಳಕೆ ಬೀಡಾದುದಾ ಹೃದಯ 
ಕರಗಿತರಸನ ಧೈರ್ಯ ಚಿತ್ತದಿ 
ಮುರಿದುದಗ್ಗದ ಮಹಿಮೆ ಶೋಕದ 
ಹೊರಿಗೆಯಲಿ ಕಾತರಿಸಿ ನಡೆದನು ನೃಪತಿ ಕೇಳೆಂದ ||೧೯||

ಕರುಣೆದೋರದೆ ನೃಪತಿ ಸತಿಯಳ 
ತೊರೆದು ಬಿಸುಟನು ವನದೊಳಗೆ ಹುಲಿ 
ಕರಡಿ ಮೃಗದುಪಟಳವ ತಾನಿನ್ನೆಂತು ಸೈರಿಪಳೊ 
ಮೊರೆಯ ಲಾಲಿಸಿ ನೋಳ್ಪೆನೆಂದುರು 
ತರದ ಪ್ರೇಮದಿ ಬಂದು ಸತಿಗೆ 
ಚ್ಚರಿಸುವಂದದಿ ತರಣಿ ತಲೆದೋರಿದನು ಪೂರ್ವದಲಿ ||೨೦||

ನಳಿನಮುಖಿ ಮೈಮುರಿದು ನಿದ್ರೆಯ 
ತಿಳಿದು ಮೆಲ್ಲನೆ ನೋಡಿದಳು ಎಡ 
ಬಲವನೀಕ್ಷಿಸಿ ಪತಿಯ ಕಾಣದೆ ಬಲಿದ ಮೂರ್ಛೆಯಲಿ 
ಮಲಗಿದಳು ಮೈಮರೆದು ನಿಮಿಷಕೆ 
ತಿಳಿದು ಕಾಣದೆ ಕಾತುರದಿ ಹಂ 
ಬಲಿಸಿ ಹಲುಬಿದಳಲ್ಲಿ ಗಿರಿತರುನಿಕರಮಧ್ಯದಲಿ ||೨೧|| 

ಹಾ ರಮಣ ನಳನೃಪತಿ ಹಾ ರಣ 
ಧೀರ ಸದ್ಗುಣಹಾರ ರಿಪುಸಂ 
ಹಾರ ನಿತ್ಯೋದಾರ ನಿರ್ಮಳಸತ್ಸಂಚಾರ 
ಘೋರಕಾನನದೊಳಗೆ ನಂಬಿದ 
ನಾರಿಯನು ಬಿಸುಡುವರೆ ತನಗಿ 
ನ್ನಾರು ಗತಿ ಮುಖದೋರೆನುತ ಹಲುಬಿದಳು ದಮಯಂತಿ ||೨೨||

ಪೊಡವಿಗಿಳಿದನೊ ಹಾಯ್ದು ಪಾವಕ 
ನೊಡಲ ಹೊಗುವೆನೊ ಕಾಳಕೂಟದ 
ಮಡುವಿನೊಳು ಮುಳುಗುವೆನೊ ಹಾಸರೆಯೊಳಗೆ ಬೀಳುವೆನೊ 
ಅಡಸಿದಾಪತ್ತಿನಲಿ ಗರಳವ
ಕುಡಿವೆನೋ ತಾನೆನುತ ಸತಿ ಬಾ 
ಯ್ಬಿಡುತ ಕಾನನದೊಳಗೆ ತಿರು ಗಿದಳಬಲೆ ಶೋಕದಲಿ ||೨೩||

ಕಾಣಿರೇಯರಸಂಚೆಗಳೆ ನೀವ್ 
ಕಾಣಿರೇ ನಿಜಪತಿಯ ಶುಕಪಿಕ 
ಕಾಣಿರೇ ಮೃಗಪಕ್ಷಿಗಳೆ ನಳಚಕ್ರವರ್ತಿಯನು 
ಕಾಣಿರೇ ತರುಲತೆಗಳಿನಿಯನ 
ಕಾಣಿರೇ ನೀವೆಂದು ಶೋಕದೊ 
ಳೇಣಲೋಚನೆ ಹಲುಬಿದಳು ಹಲವಂಗದಲಿ ಪತಿಯ ||೨೪||

ಮುಡಿಕೆದರಿ ಹುಡಿಯೊಳಗೆ ಹೊರಳುತ 
ಲೊಡಲನೀಡಾಡಿದಳು ಧರೆಯೊಳ
ಗಡವಿ ಪಾಲಾಗೆಂದು ಪಡೆದಳೊ ತನ್ನ ನಿಜಜನನಿ 
ಮಡದಿಯರು ತನ್ನಂತೆ ಲೋಕದೊ 
ಳೊಡಲ ತೆತ್ತವರುಂಟೆ ಶೋಕದಿ 
ಪೊಡವಿಪತಿ ಮುಖದೋರೆನುತ ಹಂಬಲಿಸಿದಳು ಪತಿಯ ||೨೫||

ಮಾನವಾಧಿಪ ಕೇಳು ಬನದಲಿ 
ಮಾನಿನಿಗೆ ಮತ್ತೊಂದು ಕಂಟಕ 
ಹಾನಿ ಬಂದುದೇನೆಂಬೆನು ಪತಿಗೆ ಬಾಯ್ಬಿಡುತ 
ಕಾನನದ ಬಳಿವಿಡಿದು ಬರೆ ಸು 
ಮ್ಮಾನದಲಿ ತರಗೆಲೆಯ ಹಕ್ಕೆಯ 
ಮೌನದಲಿ ಉರಗೇಂದ್ರನಿದ್ದನು ಬಲಿದ ನಿದ್ರೆಯಲಿ ||೨೬||

ತರಳೆ ಕಾಣದೆ ಬರುತ ಮೆಟ್ಟಿದ 
ಳುರಗಪತಿಯನು ಕೋಪದಲಿ ಮಿಗೆ 
ಸುರಿವ ಗರಳದಿ ರೌದ್ರಮಯರೂಪಿನಲಿ ಬಾಲಕಿಯ 
ತರುಬಿ ಹಿಡಿದುದು ತವಕದಲಿ ಹಿಮ 
ಕರನ ನುಂಗುವ ರಾಹುವಿನವೊಲ್ 
ಅರಸ ಕೇಳಂಗನೆಯ ವಿಧಿಯನು ಹೇಳಲೇನೆಂದ ||೨೭||

ಹಾ ರಮಣ ನ ಳನೃಪತಿ ತನ್ನನ 
ದಾರಿಗೊಪ್ಪಿಸಿ ಕಳೆದೆ ಹರಿಹರಿ 
ಕ್ರೂರಸರ್ಪನ ಬಾಯ್ಗೆ ತುತ್ತಾದೆನೆ ಜಗನ್ನಾಥ 
ಆರಿಗೊರಲುವೆನಿನ್ನು ಪ್ರಾಣವ 
ನಾರು ಕಾವವರಕಟ ಬಿಡಿಸೈ 
ವಾರಿಜಾಕ್ಷ ಮುಕುಂದ ಸಲಹೆಂದೊರಲಿದಳು ತರಳೆ ||೨೮||

ಶೈರಶಿಖರದೊಳಿರ್ದು ಕೇಳಿದ 
ಬಾಲಕಿಯ ಶೋಕವನು ಬಿಲ್ಲಿನ 
ಕೋಲುಗಾರನು ಕರೆದ ಬಿಲ್ಲಿನ ಶಬರನೈತಂದು 
ಆ ಲತಾಂಗಿಯ ಪಿಡಿದು ನುಂಗುವ 
ಕಾಲಭುಜಗನ ಕಂಡು ನಿಜಕರ 
ವಾಳದಲಿ ಖಂಡಿಸಿದನಹಿಯನು ಬಿಡಿಸಿದನು ಸತಿಯ ||೨೯||

ಹಾಯೆನುತ ಸುರರುಲಿಯೆ ಹಾವಿನ 
ಬಾಯೊಳಗೆ ಸಿಲುಕಿರ್ದ ಕಮಲದ 
ಳಾಯತಾಕ್ಷಿಯ ಬಿಡಿಸಿದನು ಸಂತೈಸಿದನು ಸತಿಯ 
ರಾಯ ಕೇಳೈ ರಾಹುವಿನ ಕಟ 
ವಾಯ ಚಂದ್ರನ ಸೆಳೆವವೋಲರಿ 
ದಾಯಿತಬಲೆಗೆ ಮೂರ್ಛೆ ತಿಳಿದುದು ಶಬರಮಂತ್ರದಲಿ ||೩೦||

ಬಂದು ಕೆಂದಾವರೆಯ ಕೊಳದಲಿ 
ಮಿಂದು ನಿಂದಿರೆ ಶಬರನೆಂದನು 
ಇಂದುಮುಖಿ ನೀನೆನಗೆ ಸತಿಯಾಗೆನಲು ಖತಿಗೊಂಡು 
ಇಂದೆನಗೆ ಅಸುವಿತ್ತು ಸಲಹಿದ 
ತಂದೆಯಲ್ಲವೆ ನೀನು ಕೇಳು ಪು 
ಳಿಂದ ಮುಳಿದರೆ ಶಪಿಸುವೆನು ಹೋಗೆಂದಳಿಂದುಮುಖಿ ||೩೧||

ತರುಣಿ ಕೋಪಿಸಿ ನುಡಿಯೆ ಭಯದಲಿ 
ಶಿರವ ಬಾಗಿ ಪುಳಿಂದನತ್ತಲು  
ಮರಳಿದನು ದಮಯಂತಿ ಮನದಲಿ ಪತಿಗೆ ಹಂಬಲಿಸಿ 
ಮರುಗುವಳು ಬನದೊಳಗೆ ಭೂಪನ 
ನರಸಿ ಕಾಣದೆ ಬಯಲನಪ್ಪುವ 
ಳುರವಣಿಪ ಕಣ್ಣೀರಿನಲಿ ನಡೆತಂದಳಿಂದುಮುಖಿ ||೩೨||

ಅರಸ ಕೇಳಾಶ್ಚರ್ಯವನು ಸತಿ 
ಬರುತಿರಲು ಕಾನನದಿ ನೆರೆದಿಹ 
ಮರುಳು ಬಳಗವು ಭೂತಭೇತಾಳಗಳು ತೊಲಗಿದವು 
ಶರಭ ಮೊಲ ಕಾಡಾನೆ ಸಿಂಹಗ 
ಳಿರದೆ ಜಾರಿದುವಲ್ಲಿ ಸತಿಯಳ 
ಪರಮಪಾತಿವ್ರತ್ಯಮಹಿಮೆಗೆ ನೃಪತಿ ಕೇಳೆಂದ ||೩೩||

ಮುಂದೆ ಕಂಡಳು ಹೊಳೆವ ತಾಪಸ 
ವೃಂದವನು ಕಣ್ಣೀರ ಸುರಿಸುತ 
ಬಂದವಳನುರೆ ಕೇಳಿದರು ಮುನಿವರರು ಕರುಣದಲಿ 
ಇಂದುಮುಖಿ ನೀನಾರು ಇಲ್ಲಿಗೆ 
ಬಂದ ಹದನೇನೆನಲು ಶೋಕದಿ 
ನೊಂದು ನುಡಿದಳು ಮುನಿಗಳಿಗೆ ಕೈಮುಗಿದು ವಿನಯದಲಿ ||೩೪||

ಏನನೆಂಬೆನು  ತನ್ನ ಪುಣ್ಯದ  
ಹಾನಿಯನು ಚಿತ್ತವಿಸಿ ಕರುಣದಿ 
ಮಾನನಿಧಿಗಳು ಬಲ್ಲಿರೇ ನಳಚಕ್ರವರ್ತಿಯನು 
ಆ ನರೇಂದ್ರನ ಮಡದಿ ತಾ ಮು 
ನ್ನೇನ ನೋಂತೆನೊ ಪತಿಯಗಲಿ ಘನ 
ಕಾನನಕೆ ಗುರಿಯಾದೆನೆಂದಳು ತರುಣಿ ಬಿಸುಸುಯ್ದು ||೩೫ ||

ಭೂತಳವ ನಳನೃಪತಿ ದ್ಯೂತದಿ 
ಸೋತು ಪುಷ್ಕರಗಿತ್ತು ಸತ್ಯದ 
ನೀತಿ ತಪ್ಪದೆ ಬಂದು ಬನದಲಿ ತನ್ನನಗಲಿದನು 
ಧಾತುಗುಂದಿದೆ ಪತಿಯ ಕಾಣದೆ 
ಭೀತಿಯಲಿ ನಿಮ್ಮಡಿಯ ಕಂಡೆನು 
ಭೂತದಯೆ ನಿಮಗುಂಟಲಾ ಸಲಹೆಂದಳಿಂದುಮುಖಿ ||೩೬||

ನನೆದುದಂತಃಕರಣ ಕೇಳುತ 
ಮುನಿಗಳೆಂದರು ತಾಯೆ ಶೋಕದಿ 
ಕನಲಿ ಕಂಗೆಡಬೇಡ ನಿಜಪತಿರಾಜ್ಯಸಿರಿಸುತರು 
ನಿನಗೆ ಬಂದಪರಿನ್ನು ಯೋಗದ 
ಮನದಲರಿದೆವು ನಾವು ಅಂಜದಿ 
ರೆನುತ ಪೇಳಿಯದೃಶ್ಯವಾದರು ಮುನಿಗಳೊಗ್ಗಿನಲಿ ||೩೭||

ಆ ತರುಣಿ ಬೆರಗಾಗಿ ಕನಸಿನ 
ರೀತಿಯಾಯ್ತಕಟಕಟ ಮೌನಿ 
ವ್ರಾತವೆತ್ತಲು ಸರಿದುದೋ ವಿಸ್ಮಯವಲಾಯೆನುತ 
ಆ ತಳೋದರಿ ಪತಿಯ ಕಾಣದೆ 
ಕಾತುರದಿ ಬರುತಿರಲು ಕಂಡರು 
ನೂತನದ ಬೇಹಾರಿಗಳು ತೊಳಲುವ ನಿತಂಬಿನಿಯ ||೩೮||

ಆರಿವಳು ವನಲಕ್ಷ್ಮಿಯೋ ಸುರ 
ನಾರಿಯೋ ಮಾರಾಂಗನೆಯ ಮದ 
ನಾರಿಸತಿಯೋ ಸರಸತಿಯೊ ಮೇಣಸುರಮಾನಿನಿಯೊ 
ಆರ ವನಿತೆಯೊ ಮಾಯಾರೂಪಿನ 
ಭೂರಿಭೂತವೊ ತಿಳಿಯಲರಿದಿವ
ಳಾರೆನುತ ಭಯಗೊಂಡು ಓಡಿದರಲ್ಲಿ ಬಣಜಿಗರು ೩೯||

ನೋಡಿದಳು ದಮಯಂತಿ ಭೀತಿಯ 
ಲೋಡುತಿಹ ಬೀಡಿಕೆಯ ವೈಶ್ಯರ 
ಹೇಡಿತನವನು ಕಂಡು ನಸುನಗುತಲ್ಲಿಗೈತಂದು 
ಓಡಲೇತಕೆ ನಿಮಗೆ ಉಪಹತಿ 
ಮಾಡುವವಳು ತಾನಲ್ಲ ಜಗಕತಿ 
ರೂಢಿಸಿದ ನಳನೃಪನ ಸತಿ ತಾನೆಂದಳಿಂದುಮುಖಿ ||೪೦||

ವೀರಸೇನನ ತನಯ ನಳನೃಪ 
ಧಾರಿಣಿಯನುರೆ ಸೋತು ಕಾರ್ಯದ 
ಕಾರಣದಿ ನಡೆತಂದನಡವಿಗೆ ತನ್ನನಗಲಿದನು 
ದಾರಿತಪ್ಪಿದೆನಿಲ್ಲಿ ನಿಮ್ಮನು 
ಸೇರಿದೆನು ಪರದೇಶಿ ತನಗೊಂ 
ದೂರ ತೋರಿರೆ  ನೀವೆನುತ ತುಂಬಿದಳು ಕಂಬನಿಯ ||೪೧ ||

ತಾಯೆ ನಿಮ್ಮ ಪದಾಬ್ಜದರ್ಶನ 
ವಾಯಿತೆಮಗಿಂದಿನಲಿ ಧನ್ಯರು 
ಈಯವಸ್ತೆಗೆ ತಂದುದೇ ವಿಧಿ ನಿಮ್ಮನೆನುತೆರಗಿ 
ನೋಯದಿರಿಯಿದೆ ಚೈದ್ಯಪುರವೆಂ 
ದಾ ಯುವತಿಯೊಡಗೊಂಡು ಬರುತಿರೆ 
ತೋಯಜಾಪ್ತನು ಪಶಶ್ಚಿಮಾಂಬುಧಿಗಿಳಿದನೊಲವಿನಲಿ ||೪೨||

ಹಗಲು ಸವೆದುದು ಹೊಂಬಿಸಿಲು ನೆರೆ 
ದೆಗೆದುದತಿವೇಗದಲಿ ಕತ್ತಲೆ 
ಬಿಗಿದುದವನೀತಳವ ಪೆಟ್ಟಿಗೆ ಮುಚ್ಚಿದಂದದಲಿ 
ಸುಗುಣೆ ದಮಯಂತಿಯಳ ನೋಡಲು 
ಸೊಗಸಿ ಬಂದನಿಮಿಷರವೋಲ್ ತಾ 
ರೆಗಳು ಮೂಡಿದುವಂಬರದಿ ಪ್ರಜ್ವಲಿಪ ಕಾಂತಿಯಲಿ ||೪೩||

ಅವನಿಪತಿ ಕೇಳ್ ವೈಶ್ಯಕುಲಸಂ
ಭವರು ಹಾಯ್ಕಿದರಲ್ಲಿ ಗೂಡಾ 
ರವನು ಬಿಟ್ಟರು ಪಾಳೆಯವ ಮಲಗಿದರು ರಾತ್ರಿಯಲಿ 
ಅವಧಿ ಬಂದುದನೇನನೆಂಬೆನು 
ಕವಿದು ಕಾಡಾನೆಗಳು ಮಡುವಿಗೆ 
ತವಕದಿಂ ನೀರಡಿಸಿ ಬಂದುದು ಸಿರಿಗಳಂದದಲಿ ||೪೪||

ಅಮ್ಮ ಕೇಳೀ ಮದಗಜಂಗಳು 
ನಮ್ಮ ಕೊಲುತಿವೆ ಹದನ ಕಾಣೆನು 
ನಮ್ಮನೇ ನೆರೆ ನಂಬಿ ಬಂದಿರಿ ಇದಕೆ ಗತಿಯೇನು 
ನಿಮ್ಮನಿಲ್ಲಿಗೆ ತಂದುದೇ ವಿಧಿ 
ಬೊಮ್ಮ ಬರಹವ ಮೀರುವವರಾ 
ರಮ್ಮ ಲೋಕದೊಳೆಂದು ಮರುಗಿದ ವೈಶ್ಯಕುಲತಿಲಕ ||೪೮||

ಜನನವೇ ವರಭೀಮರಾಯನ 
ಮನೆಯೊಳಗೆ ನಳಚಕ್ರವರ್ತಿಯೆ 
ಇನಿಯನಗ್ಗದ ವೀರಸೇನನೆ ಮಾವನಾಗಿರಲು 
ವನದೊಳಿಭಕರಿಗಳಿಗೆ ತಾ ನಿಜ 
ತನುವ ತೆರಬೇಕೆಂಬ ಕಾರಣ 
ತನಗಿರಲು ನೀವೇನ ಮಾಡುವಿರೆಂದಳಿಂದುಮುಖಿ ||೪೯||

ಎನುತ ಕಣ್ಣೆವೆ ಬಿಗಿದು ಮನದಲಿ 
ನೆನೆದಳಚ್ಯುತನಂಘ್ರಿಕಮಲವ 
ವನಜನಾಭ ಮುಕುಂದ ಸಲಹೆನೆ ಕರಿಗಳಾಕ್ಷಣಕೆ 
ವನಕೆ ಮರಳಿದುವವರನೆಲ್ಲರ 
ವನಿತೆ ಸಂತೈಸಿದಳು ದೈವವ
ನೆನೆದ ಭಕ್ತರಿಗುಂಟೆ ಭಯವೆಲೆ ನೃಪತಿ ಕೇಳೆಂದ ||೫೦||

ರಸದ ಲೇಪದಮಿಸುನಿಯೊ ಮಲಿನ 
ವಸನದಲಿ ಹುದುಗಿರ್ದ ರತ್ನವೊ 
ನಸಿದ ಮೇಘದೊಳೆಸೆವ ಚಂದ್ರನ ಬಿಂಬದಂದದಲಿ 
ಶಶಿವದನೆ ಬರುತಿರಲು  ಪುರಜನ 
ವೊಸೆದು ನೋಡಿದುದಲ್ಲಿಗಲ್ಲಿಗೆ 
ಬಿಸಜಮುಖಿಯಿವಳಾರೆನುತ ಬೆರಗಾಯ್ತು ಜನನಿಕರ ||೫೨||

ನುಡಿಗೆ ಶುಕಪಿಕ ನಲಿಯೆ ಮಿಗೆ ಸೆಳೆ 
ನಡು ಬಳುಕೆ ವೃತ್ತಸ್ತನಕೆ ಸೋ 
ರ್ಮುಡಿಯ ಭಾರಕೆ ಕೊರಳು ಕೊಂಕಲು ಮೆಲ್ಲಡಿಯನಿಡುತ 
ಕುಡಿತೆಗಂಗಳ ನೋಟ ಕಾರ್ಮುಗಿ 
ಲೊಡೆದು ಮಿಂಚುವ ಮಿಂಚಿನಂದದಿ 
ಸಡಗರದಿ ಬರುತಿರ್ದಳಂಗನೆ ಹೊಳಲ ಬೀದಿಯಲಿ ||೫೩||

ಹೇಮದುಪ್ಪರಿಗೆಯಲಿ ನೃಪಸತಿ 
ಕಾಮಿನಿಯರೋಲಗದೊಳೊಪ್ಪುತ 
ತಾಮರಸದಳನಯನೆ ದಮಯಂತಿಯನು ತಾ ಕಂಡು 
ಈ ಮಹಾ ಸತಿ ಯಾವಳೋ ಸು 
ತ್ರಾಮನರಸಿಯೊ ಎನುತ ಕರೆಸಿದ 
ಡಾ ಮಹಿಳೆ ಬಂದಳು ನೃಪಾಲನ ಸತಿಯ ಸಮ್ಮುಖಕೆ ||೫೪||

ತಾಯೆ ನೀನಾರಾವ ದೇಶದ 
ರಾಯನರಸಿಯಿದೇನು ನಿನಗೀ 
ಪ್ರಾಯದಲಿ ಕಳೆಗುಂದಿ ಮಾಸಿಹುದೇನು ಪೇಳೆನಲು 
ಆ ಯುವತಿ ಕಣ್ಣೀರಿನಲಿ ಪೂ 
ರಾಯ ಶೋಕದಲೆಂದಳಾ ತರ 
ಳಾಯತಾಕ್ಷಿಗೆ ತನ್ನ ವೃತ್ತಾಂತವನು ಬಿಸುಸುಯ್ದು ||೫೫||

ಕ್ಷಿತಿಯನೆಲ್ಲವ ಸೋತು ಜೂಜಿನಲಿ 
ಪತಿ ಬನಕೆ ಬಂದೆನ್ನನಗಲಿದ 
ಮತಿವಿಕಳತನದಿಂದ ತಿರುಗುತ ಬಂದೆ ನಿಮ್ಮಡಿಗೆ 
ಹಿತವರಾರನು ಕಾಣೆ ನೀವೇ 
ಗತಿಯೆನಗೆ ಪರದೇಶಿಯನು ಪರ 
ಹಿತವೆ ಪುಣ್ಯವು ರಕ್ಷಿಸೆಂದಳು ನಳನೃಪನ ರಾಣಿ ||೫೬||

ನುಡಿಯ ಕೇಳುತ ಚೈದ್ಯಭೂಪನ 
ಮಡದಿ ನೂಪುರ ಘಲಿರುಘಲಿರೆನ 
ಲಡಿಯಿಡುತ ಬಂದಪ್ಪಿ ಸೆರಗಿನೊಳೊರಸಿ ಕಂಬನಿಯ 
ಬಿಡು ವ್ಯಥೆಯ ವರಭೂಷಣಂಗಳ 
ತೊಡು ದುಕೂಲವನುಡು ಸುಮಾಲ್ಯವ 
ಮುಡಿಗೆ ಸೇರಿಸು ತರುಣಿಯೆಂದಳು ಚೈದ್ಯನೃಪನರಸಿ ||೫೭||

ದೇವಿ ನಿಮ್ಮುಪಚಾರವೇ ಸಂ 
ಭಾವನೆಯಲಾ ನಮಗೆ ಬೇರಿ 
ನ್ನಾವ ಭೂಷಣವೇಕೆ ದೇಸಿಗರಾವು ನಿಮ್ಮಡಿಯ 
ಸೇವೆಯಲಿ ತಾನಿಹೆನು  ಹೀನವ 
ನಾವು ಬಳಸುವರಲ್ಲ ತನ್ನನು 
ಕಾವ ಹದನನು ನೀವೆ ಬಲ್ಲಿರಿಯೆಂದಳಾ ಸತಿಗೆ ||೫೮||

ಎನಲು ನಸುನಗುತೆಂದಳಾ ಮಾ 
ನಿನಿಗೆ ತಮ್ಮಿಂದಾಗದುಪಹತಿ 
ನಿನಗೆ ಪೇಳೆವು ಹೀನಕೆಲಸವ ಚಿಂತೆ ಬೇಡಿನ್ನು 
ತನಗೆ ಮಗಳು ಸುನೀತಿಯಾಕೆಯ 
ಮನೆಯೊಳಿರು ಸೈರಂಧ್ರಿತನದಿಂ 
ದನವರತ ನೀನೆಂದು ನೇಮಿಸಿ ಕಳುಹಿದಳು ಮನೆಗೆ ||೫೯||
</poem>

ನೋಡಿ
ನಳಚರಿತ್ರೆ- ಸಂಧಿಗಳು>:೧೨೩೪೫೬೭೮೯
ನೋಡಿ

ವರ್ಗ:ಕನಕದಾಸರ ಸಾಹಿತ್ಯ
ವರ್ಗ:ಕನ್ನಡ ಸಾಹಿತ್ಯ